ಪ್ರತಿ ಬಾಟಲಿ ನೀರು ಬಿಸ್ಲೇರಿ ಅಲ್ಲ!

ಒಂದು ಬಿಸ್ಲೇರಿ ಕೊಡಿ! ಕೆಲವು ದಶಕಗಳ ಹಿಂದೆ ಪ್ರಯಾಣ ಮಾಡುತ್ತಿರುವಾಗ ಬಾಯಾರಿದರೆ ನಾವು ಅಂಗಡಿಯವರ ಬಳಿ ಕೇಳುತಿದ್ದದ್ದು, ಒಂದು ಬಿಸ್ಲೇರಿ ಕೊಡಿ ಅಂತ. ಆಗೆಲ್ಲ ಬಿಸ್ಲೇರಿ ಅನ್ನೋದು ಒಂದು ಬಾಟಲ್ ನೀರಿನ ಕಂಪೆನಿಯ ಹೆಸರು, ನೀರಿನ ಹೆಸರು ಅದಲ್ಲ ಅನ್ನೋದು ನಮಗೆ ಗೊತ್ತೇ ಇರಲಿಲ್ಲ.

Originally published in kn
Reactions 0
274
PAKASH DSOUZA
PAKASH DSOUZA 11 Jan, 2022 | 1 min read

ಒಂದು ಬಿಸ್ಲೇರಿ ಕೊಡಿ! ಕೆಲವು ದಶಕಗಳ ಹಿಂದೆ ಪ್ರಯಾಣ ಮಾಡುತ್ತಿರುವಾಗ ಬಾಯಾರಿದರೆ ನಾವು ಅಂಗಡಿಯವರ ಬಳಿ ಕೇಳುತಿದ್ದದ್ದು, ಒಂದು ಬಿಸ್ಲೇರಿ ಕೊಡಿ ಅಂತ. ಆಗೆಲ್ಲ ಬಿಸ್ಲೇರಿ ಅನ್ನೋದು ಒಂದು ಬಾಟಲ್ ನೀರಿನ ಕಂಪೆನಿಯ ಹೆಸರು, ನೀರಿನ ಹೆಸರು ಅದಲ್ಲ ಅನ್ನೋದು ನಮಗೆ ಗೊತ್ತೇ ಇರಲಿಲ್ಲ. ಹೌದು ಒಂದು ವಿಧದಲ್ಲಿ ನೀರಿಗೆ ಸಮಾನಾರ್ಥಕ ಪದವಾಗಿತ್ತು ಬಿಸ್ಲೇರಿ. ಜನಮನವನ್ನು ಅಷ್ಟೊಂದು ಆವರಿಸಿದ್ದ ಬಿಸ್ಲೇರಿಗೆ ಸವಾಲೊಡ್ಡುವವರು ಆಗ ಮಾತ್ರ ಅಲ್ಲ, ಈಗಲೂ ಕೂಡ ಯಾರು ಇಲ್ಲ. ಯಾವಾಗಲು ನನಗೆ ಬಿಸ್ಲೇರಿಯ ಬಗ್ಗೆ ಕುತೂಹಲ! ಈ ಬಿಸ್ಲೇರಿ ಹೆಸರು ಹೇಗೆ ಬಂದಿರಬಹುದು? ಯಾರು ಇದರ ಮಾಲೀಕರು? ಮಾರುಕಟ್ಟೆಯನ್ನು ಈ ಬಿಸ್ಲೇರಿ ಬ್ರಾಂಡ್ ಅಷ್ಟೊಂದು ಅವರಿಸಿಕೊಂಡದ್ದಾದರೂ ಹೇಗೆ ? ನಿಮಗೂ ಕುತೂಹಲ ಇದೆಯೇ? ಹಾಗಾದರೆ ಇನ್ಯಾಕೆ ತಡ. ಬನ್ನಿ ಬಿಸ್ಲೇರಿ ಬಗ್ಗೆ ತಿಳಿದುಕೊಳ್ಳುವ ನಾವು.

"ಅಮರೊ" ಎನ್ನುವುದು ಒಂದು ಇಟಾಲಿಯನ್ ಮದ್ಯವಾಗಿದ್ದು ಗಿಡಮೂಲಿಕೆಗಳಿಂದ ಇದನ್ನು ತಯಾರಿಸುತ್ತಾರೆ. ಸಾಮಾನ್ಯವಾಗಿ ಊಟದ ನಂತರ ಪಚನ ಕ್ರಿಯೆ ಸರಿಯಾಗಿ ಆಗಲು ಇದನ್ನು ಸೇವಿಸಲಾಗುತ್ತದೆ. ಸಾಮಾನ್ಯವಾಗಿ ಇದು ಸಿಹಿ ಮತ್ತು ಕಹಿ ಪರಿಮಳವನ್ನು ಹೊಂದಿರುತ್ತದೆ. ಇದನ್ನು ಮಾರುಕಟ್ಟೆಗೆ ಮೊದಲು ಪರಿಚಯಿಸಿದವರು ಫೆಲಿಸ್ ಎನ್ನುವ ಇಟಾಲಿಯನ್ ಉದ್ಯಮಿ, ಸಂಶೋಧಕ ಮತ್ತು ರಸಾಯನಶಾಸ್ತ್ರಜ್ಞ. "ಅಮಾರೊ" ಜೊತೆಗೆ ಅವರು ಬಾಟಲಿ ನೀರನ್ನು (ಖನಿಜಯುಕ್ತ ಶುದ್ಧ ಕುಡಿಯುವ ನೀರನ್ನು ) ಇಟಲಿಯ ಮಾರುಕಟ್ಟೆ ಪರಿಚಯ ಮಾಡುತ್ತಾರೆ. ಅಂದ ಹಾಗೆ ಇವರ ಸಂಪೂರ್ಣ ಹೆಸರು ಫೆಲಿಸ್ ಬಿಸ್ಲೇರಿ. ನಿಜ ಬಿಸ್ಲೇರಿ ಬ್ರಾಂಡ್ ನ ಜನಕ ಖುದ್ದು ಬಿಸ್ಲೇರಿ .......ಫೆಲಿಸ್ ಬಿಸ್ಲೇರಿ & ಕಂಪೆನಿಯ ಜನಕ ಇವರು .

ನಿಮಗೆ ಜಯಂತಿಲಾಲ್ ಚೌಹಾಣ್ ಯಾರು ಅಂತ ಗೊತ್ತೇ ? ಬಹುಷ್ಯ ಹೆಸರು ಕೇಳಿಲ್ಲ ಅನ್ನುವ ಉತ್ತರ ನಿಮ್ಮಿಂದ ಬರಬಹುದು . ಪಾರ್ಲೆ ಗೊತ್ತೇ ಅಂದ್ರೆ ? ಪಾರ್ಲೆ ಹೆಸರು ಕೇಳದವರು ವಿರಳ ಅಲ್ಲವೇ! ನಿಜ ಪಾರ್ಲೆ ಅನ್ನೊದು ಭಾರತದಲ್ಲಿ ತುಂಬಾ ಪ್ರಸಿದ್ದವಾದ ಬ್ರಾಂಡ್. ಪಾರ್ಲೆ ಕಂಪೆನಿಯನ್ನು ಹುಟ್ಟು ಹಾಕಿದವರೇ ಈ ಜಯಂತಿಲಾಲ್ ಚೌಹಾಣ್. ಪಾರ್ಲೆ ಕಂಪೆನಿಯ " ಗೋಲ್ಡ್ ಸ್ಪಾಟ್ " "ಲಿಮ್ಕಾ" "ಮಾಝ" ಯಾರಿಗೆ ತಾನೇ ಗೊತ್ತಿಲ್ಲ? 

ಅಷ್ಟಕ್ಕೂ ಈ ಇಟಲಿಯ ಬಿಸ್ಲೇರಿಗೂ, ಭಾರತದ ಪರ್ಲೆಗೂ ಎಲ್ಲಿಂದ ಸಂಬಂಧ ಅಂತ ಕೇಳುತಿರ ? ಸಂಬಂಧ ಇದೆ. ಬಿಸ್ಲೇರಿ ಕಂಪೆನಿಯ ಮಾಲೀಕ ಫೆಲಿಸ್ ಬಿಸ್ಲೇರಿಯ ಕುಟುಂಬ ವೈದ್ಯರಾಗಿದ್ದವರು ಡಾಕ್ಟರ್ ರೊಸ್ಸಿ. ಇವರು ವೈದ್ಯ ಮಾತ್ರರಲ್ಲದೆ, ಬಿಸ್ಲೆರಿಯವರ ಆಪ್ತ ಮಿತ್ರರಾಗಿದ್ರು. ಫೆಲಿಸ್ ಬಿಸ್ಲೆರಿಯವರ ಮರಣದ ನಂತರ ಡಾಕ್ಟರ್ ರೊಸ್ಸಿ ಬಿಸ್ಲೇರಿ ಕಂಪೆನಿಯ ಮಾಲೀಕತ್ವವನ್ನು ವಹಿಸಿಕೊಳ್ಳುತ್ತಾರೆ. ಡಾಕ್ಟರ್ ರೊಸ್ಸಿಗೆ ಒಬ್ಬ ವಕೀಲ ಮಿತ್ರ ಇರುತ್ತಾರೆ. ಅವರು ಈ ಬಿಸ್ಲೇರಿ ಕಂಪೆನಿಯ ಕಾನೂನು ಸಲಹೆಗಾರ ಕೂಡ ಆಗಿರುತ್ತಾರೆ. ಆ ವಕೀಲರ ಮಗನೆ ಖುಷ್ರೂ ಸುಂಟೂಕ್. ಇವರು ಕೂಡ ವೃತ್ತಿಯಲ್ಲಿ ವಕೀಲರಾಗಿರುತ್ತಾರೆ. ಬಿಸ್ಲೇರಿ ಕಂಪೆನಿ ಭಾರತದಲ್ಲಿ ಭದ್ರವಾಗಿ ತಳವೂರುವಲ್ಲಿ ಇವರು ತುಂಬಾ ಮಹತ್ವದ ಪಾತ್ರ ವಹಿಸುತ್ತಾರೆ. ಆಗ ತಾನೇ ಭಾರತಕ್ಕೆ ಸ್ವತಂತ್ರ ಲಭಿಸಿತ್ತು ಮತ್ತು ಹೊಸ ಉದ್ಯಮಗಳು ದೇಶದಲ್ಲಿ ಆರಂಭವಾಗತೊಡಗಿದ್ದವು. ಡಾಕ್ಟರ್ ರೊಸ್ಸಿಯವರ ವ್ಯವಹಾರಿಕ ಮನಸು ಭಾರತದಲ್ಲಿ ನೀರಿನ ವ್ಯಾಪಾರದ ಹೊಸ ಸಾಧ್ಯತೆಯ ಬಗ್ಗೆ ಹೊಸ ಕಲ್ಪನೆಯನ್ನು ಹುಟ್ಟುಹಾಕಿತ್ತು. ಆಗ ನೀರು ಧಾರಾಳವಾಗಿತ್ತು. ಇವರ ಆಲೋಚನೆ ಕೇಳಿ ಎಲ್ಲರೂ ನಕ್ಕು ಇದು ನಿಮ್ಮ ಹುಚ್ಚು ನಿರ್ಧಾರ ಅಂತ ಹೀಯಾಳಿಸಿಬಿಟ್ಟರು. ಆದರೆ ಡಾಕ್ಟರ್ ರೊಸ್ಸಿ ಗೆ ತಮ್ಮ ಕನಸಿನ ಬಗ್ಗೆ ಆತ್ಮ ವಿಶ್ವಾಸ ಇತ್ತು. ಗೆಳೆಯನ ಮಗ ಖುಷ್ರೂ ಸುಂಟೂಕ್ ಕೂಡ ಇವರ ಜೊತೆಗೂಡುತ್ತಾರೆ. ಆಗ ನೀರೇನೋ ಧಾರಾಳ ಸಿಗುತಿತ್ತು ನಿಜ! ಆದರೆ ಶುದ್ಧ ನೀರು ಹಲವು ಪಟ್ಟಣಗಳಲ್ಲಿ ಕನಸಿನ ಮಾತಾಗಿತ್ತು. ಇದು ರೊಸ್ಸಿ ಗೆ ಚೆನ್ನಾಗಿ ತಿಳಿದಿತ್ತು.

1965 ರಲ್ಲಿ ಡಾಕ್ಟರ್ ರೊಸ್ಸಿಯವರ ಕನಸನ್ನು ನನಸು ಮಾಡುತ್ತ ಮುಂಬಯಿ ನಗರದ ಥಾಣೆಯಲ್ಲಿ, ಖುಷ್ರೂ ಸುಂಟೂಕ್ ಬಿಸ್ಲೇರಿ ವಾಟರ್ ಪ್ಲಾಂಟ್ ಅನ್ನು ಸ್ಥಾಪಿಸುತ್ತಾರೆ. ಯಾರಾದ್ರೂ ನೀರನ್ನು ಮಾರಾಟ ಮಾಡಲು ಸಾಧ್ಯನಾ ? ನೀರನ್ನು ದುಡ್ಡು ಕೊಟ್ಟು ಯಾರಾದ್ರೂ ಕುಡಿಯುತಾರೆಯೇ ಅಂತ ಜನ ನಗತೊಡಗಿದರು.ಆದರೆ ದೇಶದ ಆರ್ಥಿಕ ರಾಜಧಾನಿಯಾದ ಮುಂಬಯಿ ಯಲ್ಲಿ ಆಗ ಶುದ್ಧ ಕುಡಿಯುವ ನೀರು ಸಿಗುತ್ತಿರಲಿಲ್ಲ. ಬಡವರು ಗತ್ಯಂತರವಿಲ್ಲದೆ ಆ ಕಲುಷಿತ ನೀರನ್ನು ಕುಡಿಯುತಿದ್ರು. ಆದರೆ ಶ್ರೀಮಂತರು , ಪ್ರವಾಸಿಗರು , ಶುದ್ಧ ನೀರಿಗಾಗಿ ಹಣ ತೆರಲು ಸಿದ್ಧವಾಗಿದ್ರು. ಇದನ್ನು ಚೆನ್ನಾಗಿಯೇ ಅರಿತಿದ್ದ ಡಾಕ್ಟರ್ ರೊಸ್ಸಿ ತಮ್ಮ ಬಿಸ್ಲೇರಿ ನೀರನ್ನು ಪಂಚತಾರಾ ಹೋಟೆಲ್ ಗಳಿಗೆ ಪೂರೈಸತೊಡಗಿದರು. ನೋಡು ನೋಡುತಿದ್ದಂತೆ ಬಿಸ್ಲೇರಿ ಇಡೀ ಮಾರುಕಟ್ಟೆಯನ್ನು ಅವರಿಸಿಕೊಂಡುಬಿಟ್ಟಿತು. ಆದರೆ ರೊಸ್ಸಿ ಮತ್ತು ಖುಷ್ರೂ ಸುಂಟೂಕ್ ಕನಸಾಗಿತ್ತು ತಮ್ಮ ಈ ಶುದ್ಧ ನೀರನ್ನು ಜನಸಾಮಾನ್ಯರಿಗೂ ತಲುಪಲಿಸಬೇಕೆಂದು. ಆ ನಿಟ್ಟಿನಲ್ಲಿ ಕಾರ್ಯಪರ್ವತರಾದರು. ಆದರೆ ಸ್ಥಳೀಯ ಜನರ ನಾಡಿಮಿಡಿತ ಅರ್ಥಮಾಡಿಕೊಳ್ಳೋದು ಸುಲಭವಾಗಿರಲಿಲ್ಲ. ಕಂಪೆನಿಯನ್ನು ವಿಸ್ತಾರಮಾಡಬೇಕೆನ್ನುವ  ಕನಸು, ಅವರು ವಿದೇಶೀಯರಾದುದರಿಂದ, ಸುಲಭದಲ್ಲಿ ಸಾಧ್ಯವಾಗುವುದು ಕನಸಿನ ಮಾತಾಗಿತ್ತು. ಹೀಗಾಗಿಕಂಪೆನಿ ಲಾಭದಲ್ಲಿರುವಾಗಲೇ, ಅದನ್ನು ಸಮರ್ಥರಿಗೆ ಮಾರಾಟ ಮಾಡಿ ಇಟಲಿಗೆ ಮರಳಲು ನಿರ್ಧಾರಮಾಡುತ್ತಾರೆ ಡಾಕ್ಟರ್ ರೊಸ್ಸಿ. ಈ ಸುದ್ದಿ ಕಾಳ್ಗಿಚ್ಚಿನಂತೆ ಭಾರತದ ವ್ಯವಹಾರಿಕ ಮಾರುಕಟ್ಟೆಯಲ್ಲಿ ಹಬ್ಬುತ್ತದೆ. ಸುದ್ದಿ ಕಿವಿಗೆ ಬಿದ್ದೊಡನೆ , ಪಾರ್ಲೆ ಕಂಪನಿಯ ಜಯಂತಿಲಾಲ್ ಚೌಹಣ್ ರವರು ಬಿಸ್ಲೇರಿ ಯೊಂದಿಗೆ ಮಾತುಕತೆ ನಡೆಸಿ 1969 ರಲ್ಲಿ 4 ಲಕ್ಷ ರೂಪಾಯಿಗಳಿಗೆ ಬಿಸ್ಲೇರಿ ಕಂಪೆನಿಯನ್ನು ಖರೀದಿಸುತ್ತಾರೆ. ಪಾರ್ಲೆ ಕಂಪೆನಿ ಬಿಸ್ಲೆರಿಯನ್ನು ಖರೀದಿಸಿದ ನಂತರ ಬಿಸ್ಲೇರಿಗೆ ಹೊಸ ಪ್ರಾಣವಾಯು ದೊರಕುತ್ತದೆ. ತಮ್ಮ ವಿನೂತನ ಮಾರುಕಟ್ಟೆಯ ತಂತ್ರದಿಂದ ಬಿಸ್ಲೇರಿ ಭಾರತದಲ್ಲಿ ಮನೆ ಮಾತಾಗುವಂತೆ ಮಾಡುತ್ತಾರೆ ಪಾರ್ಲೆಯ ರಮೇಶ್ ಚೌಹಣ್. "ಬಿಸ್ಲೇರಿ ಇಸ್ ವೆರಿ ವೆರಿ ಎಕ್ಸ್ಟ್ರಾ ಆರ್ಡಿನೇರಿ " ಎನ್ನುತ ಮಾರುಕಟ್ಟೆಯಲ್ಲಿ ಹೊಸ ಹವಾವನ್ನು ಸ್ರಷ್ಟಿಸುವ ಬಿಸ್ಲೇರಿ, ಜನ ಕುಡಿಯುವ ನೀರಿಗೆ ಮತ್ತೊಂದು ಪರ್ಯಾಯ ಹೆಸರೇ ಬಿಸ್ಲೇರಿ ಅಂತ ನಂಬುವಂತೆ ಮಾಡುತ್ತಾರೆ. ಜನ ಮಿನರಲ್ ವಾಟರ್ ಕೊಡಿ ಅಂತ ಕೇಳುವ ಬದಲು ಬಿಸ್ಲೇರಿ ಕೊಡಿ ಅಂತ ಅಂಗಡಿಯವರಲ್ಲಿ ಕೇಳುವಷ್ಟು ಪ್ರಸಿದ್ದಿ ಪಡೆಯುತ್ತೆ ಬಿಸ್ಲೇರಿ. ಆಮೇಲೆ ಅದೆಷ್ಟೋ ಕಂಪೆನಿಗಳು ಹುಟ್ಟಿ ಕೊಂಡ್ರು ಯಾರಿಂದಲೂ ಬಿಸ್ಲೇರಿ ಯನ್ನು ಮೀರಿಸಲು ಸಾಧ್ಯವಾಗುವುದಿಲ್ಲ. ಆಗ ಕೆಲವು ಕಂಪೆನಿಗಳು ಬಿಸ್ಲೇರಿ ಹೆಸರನ್ನೇ ಸಲ್ಪ ಬದಲಾಯಿಸ್ಕೊಂಡು , ಬಿಸ್ಲೇರಿ ಯಂತೆ ಪ್ಯಾಕಿಂಗ್ ಮಾಡಿಕೊಂಡು ಮಾರುಕಟ್ಟೆಗೆ ಲಗ್ಗೆ ಇಡುತ್ತಾರೆ . ಆದರೆ ಸಲ್ಪ ತನ್ನ ರೂಪ ಬದಲಿಯಿಸಿಕೊಂಡ ಬಿಸ್ಲೇರಿ "ಪ್ರತಿ ಬಾಟಲು ನೀರು ಬಿಸ್ಲೇರಿ ಅಲ್ಲ" ಅನ್ನುವ ಜಾಹಿರಾತಿನ ಮೂಲಕ ಮಾರುಕಟ್ಟೆಯಿಂದ ತನ್ನ ಪ್ರತಿಸ್ವರ್ದಿಗಳು ಓಡಿ ಹೋಗುವಂತೆ ಮಾಡುತ್ತೆ. ಹೌದು ಬಿಸ್ಲೇರಿ ಕೇವಲ ಬ್ರಾಂಡ್ ಅಲ್ಲ. ಶುದ್ಧ ಕುಡಿಯುವ ನೀರಿಗೆ ಅದು ಪರ್ಯಾಯ ಅನ್ನುವುದು ಒಂದು ನಂಬಿಕೆ. ಬಿಸ್ಲೇರಿ ಪ್ರಸ್ತುತ ಭಾರತದಲ್ಲಿ 103 ಉತ್ಪಾದನಾದ ಘಟಕಗಳೊಂದಿಗೆ , ವಿದೇಶಕ್ಕೆ ಲಗ್ಗೆ ಇಟ್ಟಿರೋದು ಮಾತ್ರವಲ್ಲ . 60% ದಷ್ಟು ದೇಶದ ಮಾರುಕಟ್ಟೆಯನ್ನು ಆವರಿಸಿಕೊಂಡಿದೆ. ಬಹುಶ್ಯ ಬೇರೆ ಯಾವುದೇ  ಕಂಪೆನಿಗಳು ಅದರ ನಾಯಕತ್ವಕ್ಕೆ ಸವಾಲೊಡ್ಡುವುದು ಕನಸಿನ ಮಾತು!

ಪ್ರಕಾಶ್ ಮಲೆಬೆಟ್ಟು


0 likes

Published By

PAKASH DSOUZA

pakashdsouza

Comments

Appreciate the author by telling what you feel about the post 💓

Please Login or Create a free account to comment.