ದೇವರು , ಕಬೀರ್ ದಾಸರು ಮತ್ತು ಮಗಳು!

ಐದನೇ ತರಗತಿಯಲ್ಲಿ ಓದುತ್ತಿರುವ ನನ್ನ ಮಗಳು, ಅಪ್ಪ ಮುಂದಿನ ತಿಂಗಳು ಪರೀಕ್ಷೆ ಇದೆ. ಸಲ್ಪ ಹಿಂದಿ ಕಲಿಯಲು ಸಹಾಯ ಮಾಡ್ತಿಯಾ ಅಂತ ಕೇಳಿದಾಗ, ಸರಿ ಮಗಳೇ ಪುಸ್ತಕ ತೆಗೆದುಕೊಂಡು ಬಾ ಅಂತ ಹೇಳಿ ಅವಳ ಜೊತೆ ಕುಳಿತಿಕೊಂಡೆ.ಅದರಲ್ಲಿ ಒಂದು ಪದ್ಯ ಭಾರತ ಕಂಡ ಮಹಾನು ಸಂತ ಕಬೀರ್ ದಾಸ್ ರವರು ರಚಿಸಿದ್ದು. ಅವಳಿಗೆ ಮೊದಲಿಗೆ ಕಬೀರ್ ದಾಸ್ ರವರ ಬಗ್ಗೆ ಒಂದು ಕಿರು ಪರಿಚಯ ಮಾಡಿಕೊಟ್ಟೆ. ನೋಡಮ್ಮ ಕಬೀರ್ ದಾಸ್ ರವರು ಜಾತಿ ಮುಖ್ಯವಲ್ಲ , ಗುಣ ಮುಖ್ಯ ಅಂತ ಹೇಳುತಿದ್ದರು. ದೇವರನ್ನು ರಾಮ , ರಹೀಮ್ ಹೇಗೆ ಕರೆದ್ರು ಸರಿಯೇ ಆದರೆ ಭಕ್ತಿ ಭಾವದಿಂದ ಅವರನ್ನು ನೆನೆಯಬೇಕು ಅಂತ ಅವರು ಹೇಳುತಿದ್ದರು ಅಂತ ಹೇಳಿಕೊಟ್ಟೆ. ಅವಳ ಮುಖಭಾವದಿಂದ ಅವಳಿಗೆ ನಾನು ಹೇಳಿದ್ದು ಸರಿಯಾಗಿ ಅರ್ಥವಾಗಲಿಲ್ಲ ಅನ್ನೋದು ನನಗೆ ಗೊತ್ತಾಯಿತು. ಅಲ್ಲ ಅಪ್ಪ ನೀನು ಹೇಳುತಿಯ ಸಂತ ಕಬೀರ್ ರವರು ದೇವರನ್ನು ಹೇಗೆ ಬೇಕಾದ್ರು ಕರೆಯಬಹುದು ಅಂತ ಹೇಳಿದ್ದಾರೆ ಅಂತ, ದೇವರನ್ನು ಯಾವ ಹೆಸರಿನಿಂದ ಯಾರು ಬೇಕಾದ್ರು ಕರೆಯಬಹುದಾದ್ರೆ , ಯಾಕೆ ಅಲ್ಲಿ ಕಿತ್ತಾಡಿಕೊಳ್ಳುತಿದ್ದಾರೆ?

Originally published in kn
Reactions 0
320
PAKASH DSOUZA
PAKASH DSOUZA 18 Feb, 2022 | 1 min read

ಐದನೇ ತರಗತಿಯಲ್ಲಿ ಓದುತ್ತಿರುವ ನನ್ನ ಮಗಳು, ಅಪ್ಪ ಮುಂದಿನ ತಿಂಗಳು ಪರೀಕ್ಷೆ ಇದೆ. ಸಲ್ಪ ಹಿಂದಿ ಕಲಿಯಲು ಸಹಾಯ ಮಾಡ್ತಿಯಾ ಅಂತ ಕೇಳಿದಾಗ, ಸರಿ ಮಗಳೇ ಪುಸ್ತಕ ತೆಗೆದುಕೊಂಡು ಬಾ ಅಂತ ಹೇಳಿ ಅವಳ ಜೊತೆ ಕುಳಿತಿಕೊಂಡೆ.ಅದರಲ್ಲಿ ಒಂದು ಪದ್ಯ ಭಾರತ ಕಂಡ ಮಹಾನು ಸಂತ ಕಬೀರ್ ದಾಸ್ ರವರು ರಚಿಸಿದ್ದು. ಅವಳಿಗೆ ಮೊದಲಿಗೆ ಕಬೀರ್ ದಾಸ್ ರವರ ಬಗ್ಗೆ ಒಂದು ಕಿರು ಪರಿಚಯ ಮಾಡಿಕೊಟ್ಟೆ. ನೋಡಮ್ಮ ಕಬೀರ್ ದಾಸ್ ರವರು ಜಾತಿ ಮುಖ್ಯವಲ್ಲ , ಗುಣ ಮುಖ್ಯ ಅಂತ ಹೇಳುತಿದ್ದರು. ದೇವರನ್ನು ರಾಮ , ರಹೀಮ್ ಹೇಗೆ ಕರೆದ್ರು ಸರಿಯೇ ಆದರೆ ಭಕ್ತಿ ಭಾವದಿಂದ ಅವರನ್ನು ನೆನೆಯಬೇಕು ಅಂತ ಅವರು ಹೇಳುತಿದ್ದರು ಅಂತ ಹೇಳಿಕೊಟ್ಟೆ. ಅವಳ ಮುಖಭಾವದಿಂದ ಅವಳಿಗೆ ನಾನು ಹೇಳಿದ್ದು ಸರಿಯಾಗಿ ಅರ್ಥವಾಗಲಿಲ್ಲ ಅನ್ನೋದು ನನಗೆ ಗೊತ್ತಾಯಿತು. ಅಲ್ಲ ಅಪ್ಪ ನೀನು ಹೇಳುತಿಯ ಸಂತ ಕಬೀರ್ ರವರು ದೇವರನ್ನು ಹೇಗೆ ಬೇಕಾದ್ರು ಕರೆಯಬಹುದು ಅಂತ ಹೇಳಿದ್ದಾರೆ ಅಂತ, ದೇವರನ್ನು ಯಾವ ಹೆಸರಿನಿಂದ ಯಾರು ಬೇಕಾದ್ರು ಕರೆಯಬಹುದಾದ್ರೆ , ಯಾಕೆ ಅಲ್ಲಿ ಕಿತ್ತಾಡಿಕೊಳ್ಳುತಿದ್ದಾರೆ?

ಅವಳ ಪ್ರಶ್ನೆಗೆ ಸಮಾಧಾನಕರವಾದ ಉತ್ತರ ನಾನು ಕೊಡಬೇಕಿತ್ತು. ನನ್ನ ಬಾಲ್ಯದ ದಿನಗಳು ನೆನಪಿಗೆ ಬಂತು. ನಾನು ಓದಿದ್ದು ಕ್ರೈಸ್ತ ಭಗಿನಿಯರು ನಡೆಸುತ್ತಿದ್ದ ಕಾನ್ವೆಂಟ್ ಶಾಲೆಯಲ್ಲಿ . ಆಗ ನಮ್ಮಲ್ಲೂ ಈ ಪ್ರಶ್ನೆಗಳು ಮೂಡುತ್ತಿದ್ವು. ನಾವು ಮಾತ್ರ ಯಾಕೆ ಚರ್ಚಿಗೆ ಹೋಗಬೇಕು ? ನನ್ನ ಮಿತ್ರ ದೇವಸ್ಥಾನಕ್ಕೆ ಹೋಗುತ್ತಾನೆ ! ಅವನು ಯಾಕೆ ಚರ್ಚಿಗೆ ಬರೋದಿಲ್ಲ.! ಆಗ ನನ್ನ ಗುರುಗಳು , ನನ್ನ ಹೆತ್ತವರು ನನಗೆ ಹೇಳಿಕೊಟ್ಟಿದ್ದು , "ದೇವನೊಬ್ಬ ನಾಮ ಹಲವು" . ನಾನು ಮಗಳಿಗೆ ಹೇಳಿದೆ, ದೇವರಿಗೋಸ್ಕರ ಜನ ಜಗಳ ಆಡೋದು ಕೇಳಿದ್ದೀಯಾ ಸರಿ, ದೇವರು ಜಗಳ ಆಡಿಕೊಂಡ್ರು ಅನ್ನೋದನ್ನು ಯಾವತ್ತಾದ್ರೂ ನೀನು ಕೇಳಿದೀಯಾ ? ಇಲ್ಲ ಅಪ್ಪ ನಾನು ಕೇಳಿಲ್ಲ ಅನ್ನೋ ಉತ್ತರ ಅವಳಿಂದ ಬಂತು. ನಿಜ ಮಗಳೇ ದೇವರು ಜಗಳ ಆಡೋದು ಇಲ್ಲ ಯಾಕೆಂದ್ರೆ , ದೇವರು ಒಬ್ಬರೇ ಇರೋದು. ಅವರು ಬೇರೆ ಬೇರೆ ರೂಪಗಳಲ್ಲಿ, ಬೇರೆ ಬೇರೆ ಹೆಸರುಗಳಲ್ಲಿ , ಕಾಣಿಸಿಕೊಳ್ಳುತ್ತಾರೆ ನಿಜ . ಆದರೆ ಅವರು ಒಬ್ಬರೇ. ‘’ದೇವನೊಬ್ಬ ನಾಮ ಹಲವು’’ ಮಗಳೇ.

ಈಗ ಪ್ರಶ್ನೆ ಕೇಳೋ ಸರದಿ ನಂದು! ಮಗಳೇ ದೇವರನ್ನು ನೋಡಿದೀಯ ನೀನು ? ಅಪ್ಪ ಪ್ರತ್ಯಕ್ಷ ನಾನು ದೇವರನ್ನು ನೋಡಿಲ್ಲ ಆದರೆ ದೇವರು ಇದ್ದಾರೆ ಅನ್ನುವ ನಂಬಿಕೆ ನನ್ನಲ್ಲಿದೆ. ಅವನ ಇರುವಿಕೆಯನ್ನು ನಾನು ಅನುಭವಿಸಿದ್ದೇನೆ. ಅವಳ ಉತ್ತರ ನನಗೆ ಸಂತೋಷ ಕೊಟ್ಟಿತು. ಹೌದು ಮಗಳೇ ,  ದೇವರು ಎನ್ನುವುದು ಒಂದು ಅನುಭೂತಿ! ಆದರೆ ಅದು ಉನ್ಮಾದ ಆಗಬಾರದು. ಪ್ರಪಂಚದಲ್ಲಿ ದೇವರನ್ನು ನಂಬದ ನಾಸ್ತಿಕರು ಕೂಡ ಬಹಳ ಜನ ಇದ್ದಾರೆ. ಅವರು ನಂಬದಿರಲು ವೈಜ್ಞಾನಿಕ ಕಾರಣಗಳು ಕೂಡ ಇರಬಹುದು. ಅವರನ್ನು ನಾವು ಅನುಸರಿಸಬೇಕೆಂದು ಏನು ಇಲ್ಲ. ಆದರೆ ಪ್ರತಿಯೊಬ್ಬರ ಭಾವನೆಗಳನ್ನು ನಾವು ಗೌರವಿಸಬೇಕು. ಇತರರ ಆಚರಣೆಗಳನ್ನು ನಾವು ಅವಹೇಳನೆ ಮಾಡಬಾರದು ಮಗಳೇ . ದೇವರು ಇದ್ದಾರೆ ಎನ್ನುವ ನಂಬಿಕೆ ನಮ್ಮ ಹೃದಯದಲ್ಲಿ ಅಚಲವಾಗಿರಬೇಕು. ಆ ನಂಬಿಕೆ , ನಾವು ಕೆಟ್ಟ ದಾರಿ ಹಿಡಿಯದಂತೆ, ನಮ್ಮ ಕಷ್ಟದ ಸಮಯದಲ್ಲಿ ನಾವು ಕಂಗೆಡದಂತೆ , ನಾವು ಒಬ್ಬಂಟಿಯಾದಾಗ ಮಾನಸಿಕವಾಗಿ ಕುಗ್ಗಿ ಹೋಗದಂತೆ, ನಮ್ಮನ್ನು ಕಾಪಾಡುತ್ತೆ.

 ಆದ್ರೂ ಅಪ್ಪ ದೇವರಿಗೋಸ್ಕರ ಜನ ಯಾಕೆ ಜಗಳ ಆಡ್ತಾರೆ ಅಂತ ಮಗಳು ಮತೊಮ್ಮೆ ಕೇಳಿದಾಗ ನಾ ಹೇಳಿದೆ ಅರಿವಿನ ಕೊರತೆ ಮಗಳೇ. ನಾನು ನಿನಗೆ ಹೇಳಿದ್ದೆ ಅಲ್ವ, ನಮ್ಮ ಧರ್ಮವನ್ನು , ನಮ್ಮ ಆಚರಣೆಯನ್ನು ನಾವು ಪ್ರೀತಿಸಬೇಕು ಮತ್ತು ಅನುಸಿರಿಸಬೇಕು ಹಾಗೆ ಇತರ ಧರ್ಮಗಳನ್ನು, ಅವರ ಆಚರಣೆಗಳನ್ನು ನಾವು ಗೌರವಿಸಬೇಕು. ಇಷ್ಟಾಗಿಯೂ ಕೆಲವೊಮ್ಮೆ ಕೆಲವರ ಆಚರಣೆಗಳಿಂದ ನಮಗೆ ತೊಂದರೆ ಆಗುತ್ತೆ ಅಂತ ಅಂದ್ರೆ ಅದನ್ನು ಕೂಡ ಶಾಂತಯುತವಾಗಿ ಬಗೆಹರಿಸಿಕೊಳ್ಳಲು ಸಾಧ್ಯವಿದೆ. ಆದರೆ ಅದಕ್ಕೆ ಮುಖ್ಯವಾಗಿ ಬೇಕಾಗಿರೋದು ಮಾನವತೆ. ಅಂದ್ರೆ ಇತರರನ್ನು ನಾವು ನಮ್ಮಂತೆ ಅಂತ ಭಾವಿಸಿದಾಗ ಮಾತ್ರ ಅಲ್ಲಿ ಜಗಳ ಕೋಪ ತಾಪ ಇರೋದಿಲ್ಲ.

ಸರಿ ಅಪ್ಪ. ಈ ಕಬೀರ್ ದಾಸ್ ರವರ ಈ ಪದ್ಯದ ಅರ್ಥ ಸಲ್ಪ ಹೇಳುತಿಯ? ನನಗೆ ನನ್ನ ಶಿಕ್ಷಕಿ ಹೇಳಿಕೊಟ್ಟಿದ್ದಾರೆ ಆದರೂ ನನ್ನಲ್ಲಿ ಒಂದು ಸಂಶಯ ಇದೆ. ಸರಿ ಮಗಳೇ ಕೇಳಿಲ್ಲಿ ಸಂತ ಕಬೀರ್ ಹೇಳುತ್ತಾರೆ. " ಗುರು ಗೋವಿಂದ್ ದೌ ಖಡೆ, ಕಾಕೆ ಲಗೂನ್ ಪಾಯ್ , ಬಲಿಹಾರೀ ಗುರು ಅಪನೋ , ಗೋವಿಂದ್ ದಿಯೋ ಬತಾಯ್ "ಅಂದರೆ ಜೀವನದಲ್ಲಿ ಗುರುವಿನ ನಿಜವಾದ ಪ್ರಾಮುಖ್ಯತೆ ಏನು ಎಂಬುದನ್ನು ಕಬೀರ್ ದಾಸ್ ರವರು ಈ ದ್ವಿಪದಿಯ ಮೂಲಕ ವಿವರಿಸಲು ಪ್ರಯತ್ನಿಸುತ್ತಿದ್ದಾರೆ. ದೇವರು ಮತ್ತು ಗುರುಗಳ ನಡುವೆ ಮೊದಲ ಸ್ಥಾನದಲ್ಲಿ ಯಾರನ್ನು ಇಟ್ಟುಕೊಂಡು ಆರಿಸಬೇಕು ಎಂದು ಅವರು ಹೇಳಲು ಬಯಸುತ್ತಾರೆ. ಹೌದಪ್ಪ ನನ್ನ ಶಿಕ್ಷಕಿ ಕೂಡ ಇದನ್ನೇ ಹೇಳಿದ್ರು. ಆದರೆ ಎಲ್ಲರಿಗಿಂತ ಪ್ರಮುಖ ಸ್ಥಾನ ನಮ್ಮನ್ನು ಸ್ರಷ್ಟಿಸಿದ ಆ ಭಗವಂತನಿಗೆ ನಾವು ಕೊಡಬೇಕಲ್ವಾ ? ಗುರುವಿನ ಸ್ಥಾನ ನಂತರ ಬರುತ್ತೆ ಅಲ್ವ ಅಪ್ಪ! ನೀನು ಹೇಳೋದು ನಿಜ ಮಗ ಆದರೆ ಇಲ್ಲಿ ಆ ಭಗವಂತ ನ ಪರಿಚಯ ನಿನಗೆ ಮಾಡಿಕೊಡೋದು ಗುರುಗಳು. ನಿನ್ನನ್ನು ದೇವರೊಂದಿಗೆ ಬೆಸೆಯೋದೆ ಗುರು. ಮಕ್ಕಳ ಮೊದಲ ಗುರು ಅವರ ಅಪ್ಪ ಅಮ್ಮ, ಅಜ್ಜ ಅಜ್ಜಿ , ಕುಟುಂಬದ ಪ್ರಿಯ ಪಾತ್ರರು , ಶಾಲಾ ಶಿಕ್ಷಕರು. ಇವರು ಮಕ್ಕಳ ಪ್ರತಿಯೊಂದು ಬೆಳವಣಿಗೆಯಲ್ಲಿ , ಅವರಿಗೆ ಬದುಕುವ ರೀತಿಯನ್ನು ಹೇಳಿಕೊಡುತ್ತಾರೆ. ನಿನ್ನನ್ನು ಒಳ್ಳೆಯ ವ್ಯಕ್ತಿಯಾಗಿ ರೂಪಿಸೋದೇ ಗುರುಗಳು. ದೇವರ ಪರಿಚಯ ಮಾಡಿಕೊಟ್ಟು ಅವರನ್ನು ಹೇಗೆ ಪೂಜಿಸುವುದು ಎನ್ನುವುದನ್ನು ತಿಳಿಸಿಕೊಡುವುದು ಕೊಡುವುದು ಕೂಡ ಗುರುಗಳೇ. ಒಂದೊಮ್ಮೆ ದೇವರು ಮತ್ತು ಗುರು ಇಬ್ಬರು ಒಟ್ಟಿಗೆ ಕಾಣಿಸಿಕೊಂಡರೆ ನೀನು ಮೊದಲು ನಮಿಸಬೇಕಾಗಿರುವುದು ಗುರುಗಳನ್ನು , ನಂತರ ದೇವರನ್ನು . ಇದನ್ನು ಭಗವಂತ ಕೂಡ ಮೆಚ್ಚುತ್ತಾರೆ.. ಗುರುಗಳೇ ನಮ್ಮ ಪ್ರತ್ಯಕ್ಷ ದೇವರು.

ಮಗಳಿಗೆ ನಾನು ಹೇಳಿದ್ದು ಅರ್ಥವಾಯಿತು ಕಾಣುತ್ತೆ. ನಿಜ ಅಪ್ಪ ಅಂತ ಹೇಳಿದ್ಲು. ಆದರೆ ನನ್ನ ಮನ ಯೋಚಿಸತೊಡಗಿತು ಇತ್ತೀಚಿಗೆ ನಡೆದ ಘಟನೆಗಳ ಬಗ್ಗೆ! ಶಿಕ್ಷಕರು ಅಂದೊಡದೇ ಆದರ್ಶ ವ್ಯಕ್ತಿಗಳು ಅನ್ನುವ ಭಾವ ನಮ್ಮ ಮನಸಿನೊಳಗೆ ಮೂಡುತ್ತೆ. ಅವರ ಮಾತಿಗೆ ನಾವೆಂದು ಎದುರುತ್ತರ ಕೊಟ್ಟದ್ದೇ ಇಲ್ಲ. ಇಂದಿಗೂ ಆ ಆದರ್ಶ ಹಾಗೆ ಉಳಿದಿದಿಯೇ ಇಲ್ಲ ಶಿಕ್ಶಕ ಎನ್ನುವುದು ಕೇವಲ ಒಂದು ವೃತ್ತಿ ಯಾಗಿ ಬಿಟ್ಟಿದೆಯೇ ? ಒಂದನೇ ತರಗತಿಯಿಂದಲೇ , ಅನೇಕ ಮಹನೀಯರ ಬಗ್ಗೆ ಪಾಠಗಳಲ್ಲಿ ನಾವು ಓದಿ ತಿಳಿದುಕೊಳ್ಳುತೇವೆ. ಭಾರತ ತಾಯಿಯ ಮಕ್ಕಳು ನಾವೆಲ್ಲ ಒಂದೇ ಅನ್ನುವ ಭಾವನೆಯನ್ನು ಪಠ್ಯ ಪುಸ್ತಕಗಳು , ಶಿಕ್ಷಕರು ಮೂಡಿಸುತ್ತಾರೆ. ಹಾಗಾದರೆ ನಾವು ಎಡವುತ್ತಿರುವುದು ಎಲ್ಲಿ ? ಮೊನ್ನೆ ಮಕ್ಕಳು ವರ್ತಿಸಿದ ರೀತಿ ಸಮರ್ತನೀಯವೇ ? ಬಾಹ್ಯ ಶಕ್ತಿಗಳು , ಶಿಕ್ಷಕರನ್ನು , ಪೋಷಕರನ್ನು ಮೀರಿ ಮಕ್ಕಳನ್ನು ನಿಯಂತ್ರಿಸುವಷ್ಟು ಶಕ್ತಿ ಪಡೆದದ್ದು ಯಾವಾಗ. ಹೀಗೆ ಆದ್ರೆ ಮುಂದಿನ ಪೀಳಿಗೆಯ ಭವಿಷ್ಯ ಏನು ? ನಿಜವಾಗಿಯೂ ನಾವು ತುಂಬಾ ಗಂಭೀರವಾಗಿ ಯೋಚಿಸಬೇಕಾದ ಸಮಯ ಬಂದಿದೆ.

ಅಪ್ಪ ಏನು ಯೋಚನೆ ಮಾಡ್ತಾ ಇದ್ದೀಯಾ ? ಇದರ ಅರ್ಥ ಹೇಳು ಅಂತ ಮಗಳು ಹೇಳಿದಾಗ ಮತ್ತೆ ಪುಸ್ತಕದತ್ತ ಕಣ್ಣು ಹಾಯಿಸಿದೆ.

"ಐಸೀ ವಾಣೀ ಬೊಲಿಯೇ, ಮನ್ ಕ ಆಪೇ ಖೋಏ, ಔರನ್ ಕೋ ಶೀತಲ್ ಕರೇ, ಆಫುನ್ ಶೀತಲ್ ಹೋಏ" ನಿಜ ಮಗಳೇ, ನಮ್ಮ ಮಾತು ಮಧುರವಾಗಿರಬೇಕು. ಯಾವುದೇ ಸಂದರ್ಭದಲ್ಲಿ , ಅದೆಷ್ಟು ಬೇಕಾದ್ರು ಕೋಪ ಬಂದಿರಲಿ , ನಾವು ಏರುಗತಿಯಲ್ಲಿ ಮಾತನಾಡಬಾರದು. ನಮ್ಮ ಎದುರು ನಿಂತಿರುವವರು ಕೂಡ ಎಷ್ಟೇ ಕೋಪಗೊಂಡಿದ್ರು , ನಮ್ಮ ಮಾತು ಕೇಳಿ ಅವರು ಕೋಪ ಮರೆತುಬಿಡಬೇಕು. ನಮ್ಮ ಮಾತು ಅವರನ್ನು ಮಾತ್ರವಲ್ಲ , ನಮ್ಮ ಮನಸ್ಸನ್ನು ಕೂಡ ಶಾಂತ ಗೊಳಿಸಿಸಬೇಕು. ನಿನಗೆ ಒಂದು ಮಾತು ಹೇಳುತೇನೆ ಕೇಳೇ. ಜೀವನದಲ್ಲಿ ಯಾವುದೇ ಸಂದರ್ಭದಲ್ಲಿ , ನಾವು ತೀರಾ ಕೀಳುಮಟ್ಟಕ್ಕೆ ಇಳಿದು ಮಾತನಾಡಬಾರದು. ನಮಗೆ ಯಾರಾದ್ರೂ ಕೆಟ್ಟ ಶಬ್ದ ಬಳಸಿ ಮಾತನಾಡಿದ್ರು , ನಾವು ಅವರ ಮಟ್ಟಕ್ಕೆ ಇಳಿಯದೆ ಗೌರವದಿಂದ ಉತ್ತರ ಕೊಟ್ಟರೆ ಅವರು ಕೂಡ ಸರಿದಾರಿಗೆ ಬರುತ್ತಾರೆ. ನಾವು ಕೋಪಗೊಂಡಷ್ಟು ಸಮಸ್ಯೆ ದೊಡ್ಡದಾಗುತ್ತ ಸಾಗುತ್ತದೆ. ನಮ್ಮ ಮಾತು ಮಧುರವಾಗಿ , ಗೌರವಯುತವಾಗಿ ಇದ್ದಾರೆ , ಯಾರನ್ನು ಬೇಕಿದ್ರೂ ನಾವು ಶಾಂತಗೊಳಿಸಬಹುದು. ಇದನ್ನು ನೀನು ನಿನ್ನ ಜೀವಮಾನದುದ್ದಕ್ಕೂ ಅಳವಡಿಸಿಕೊಳ್ಳಬೇಕು ಮಗಳೇ. ಸರಿ ಅಪ್ಪ ಅಂತ ಹೇಳಿದಳು ಮಗಳು . ಆದರೆ ನನ್ನ ಮನ ಮೊತೊಮ್ಮೆ ಯೋಚಿಸಲಾರಂಭಿಸಿತು. ನಾವು ಎಲ್ಲವನ್ನು ಮಕ್ಕಳಿಗೆ ಹೇಳಿಕೊಡುತೇವೆ. ನ್ಯಾಯ ನೀತಿ , ಪ್ರೀತಿ , ಸಹೋದರತ್ವ , ಶಿಷ್ಟಾಚಾರ, ಸಹಿಷ್ಟುತೆ ಎಲ್ಲವನ್ನು .ಆದ್ರೆ ಮಕ್ಕಳು ಬೆಳೆಯುತ್ತಿದ್ದಂತೆ ಇದನೆಲ್ಲ ಏಕೆ ಮರೆತು ಬಿಡುತ್ತಾರೆ ?

 

ಅಪ್ಪ ಇನ್ನೊಂದು ಇದೆ, ಅಂತ ಮಗಳು ಹೇಳಿದಾಗ ಮತ್ತೊಂದು ಅರ್ಥ ಪೂರ್ಣವಾದ ಪದ್ಯ ಕಂಡು ಬಂತು. " ಕಲ್ ಕರೇ ಸೊ ಆಜ್ ಕರ್, ಆಜ್ ಕರೇ ಸೊ ಅಬ್,ಪಲ್ ಮೇ ಪ್ರಳಾಯ್ ಹೋಗೀ , ಬಹುರಿ ಕರೇಗಾ ಕಬ್" ನೋಡು ಮಗಳೇ , ನಿನಗೆ ಶಾಲೆಯಲ್ಲಿ ಒಂದು ಮನೆ ಕೆಲಸ ಕೊಟ್ಟಿದ್ದಾರೆ. ನಾಳೆ ಸಂಜೆ 5 ಗಂಟೆಯೊಳಗೆ ನಿಯೋಜಿಸಿದನ್ನು (ಅಸೈನ್ಮೆಂಟ್) ಇಮೈಲ್ ಮೂಲಕ ಸಲ್ಲಿಸಿದರೆ ಮಾತ್ರ ಅಂಕ ಸಿಗುತ್ತೆ ಅಂತ ಹೇಳಿದ್ದಾರೆ. ಆದರೆ ನೀನು ನಾಳೆ ಹೇಗೋ ರಜೆ ಇದೆ ಅಂತ ಇವತ್ತು ಅದನ್ನು ಮುಟ್ಟೋಕೆ ಹೋಗಲ್ಲ.  ನಾಳೆ ಕೂಡ ಸಂಜೆ ಕಳುಹಿಸಕ್ಕೆ ಇರೋದಲ್ವಾ ಪರವಾಗಿಲ್ಲ ಸಮಯ ಇದೆ ಅಂತ ಬೆಳಿಗ್ಗೆ ಮುಟ್ಟೋದೇ ಇಲ್ಲ. ಆಮೇಲೆ ಒಂದೆರಡು ಗಂಟೆ ಇರುವಾಗ  ಕಂಪ್ಯೂಟರ್ ಎದುರಿನಲ್ಲಿ ಕುಳಿತುಕೊಳ್ಳುತಿಯ. ಆದರೆ ಗ್ರಹಚಾರಕ್ಕೆ ಕಂಪ್ಯೂಟರ್ ನಲ್ಲಿ ಏನೋ ತೊಂದರೆ ಕಾಣಿಸಿಕೊಂಡು ನಿನಗೆ ಕೊಟ್ಟ ಕೆಲಸ ಮಾಡಿ ಮುಗಿಸಲು ಸಾಧ್ಯವಾಗೋದಿಲ್ಲ. ಸುಮ್ಮನೆ ಅಂಕಗಳನ್ನು ಕಳೆದುಕೊಳ್ಳುತಿಯ . ನಾನು ಏನು ಹೇಳಿದ್ದು ಅರ್ಥ ಆಯ್ತಾ ನಿನಗೆ. ಕಬೀರ್ ದಾಸ್ ರವರು ಇದೆ ಹೇಳ್ತಾ ಇರೋದು. ನಾಳೆ ಮಾಡಬೇಕಾಗಿರುವ ಕೆಲಸವನ್ನು ಇಂದೇ ಮಾಡಿ ಮುಗಿಸು. ಇಂದು ಮಾಡಬೇಕಾಗಿರುವ ಕೆಲಸವನ್ನು ಈಗ. ನಾಳೆ ಇದೆಯೋ, ಇನ್ನೊಂದು ಕ್ಷಣ ಇದೆಯೋ ಇಲ್ಲವೋ ಯಾರಿಗೆ ಗೊತ್ತು ಅಲ್ವ .

ಸರಿ ಮಗಳೇ ಇವತ್ತಿಗೆ ಇಷ್ಟು ಸಾಕು, ನಾನು ಹೇಳಿ ಕೊಟ್ಟದ್ದು ಪರೀಕ್ಷೆಗೆ ಮಾತ್ರವಲ್ಲ .ಇದನ್ನು ನೀನು ನಿನ್ನ ಬದುಕಿನಲ್ಲೂ ಅಳವಡಿಸಿಕೊಳ್ಳಬೇಕು ಅಂತ ಹೇಳಿ ಇವತ್ತಿನ ಪಾಠ ಮುಗಿಸಿದೆ. ಆದರೂ ಮನಸಿಗೆ ಸಮಾಧಾನವಿಲ್ಲ. ಭಗವಂತನಲ್ಲಿ ಬೇಡಿಕೊಳ್ಳೋದು ಇಷ್ಟೇ ,ಮಕ್ಕಳಿಗೆ ವಿದ್ಯೆ ಬುದ್ದಿಯ ಜೊತೆ ಸದ್ಬುದ್ಧಿ ಕೊಟ್ಟು ಅವರನ್ನು ಕಾಪಾಡು ದೇವಾ.

ಪ್ರಕಾಶ್ ಮಲೆಬೆಟ್ಟು

0 likes

Published By

PAKASH DSOUZA

pakashdsouza

Comments

Appreciate the author by telling what you feel about the post 💓

Please Login or Create a free account to comment.